ಎಕ್ಸಲೆಂಟ್ ವಿದ್ಯಾಸಂಸ್ಥೆಯಲ್ಲಿ ತುಳುನಾಡ ಮಾಣಿಕ್ಯ ಅರವಿಂದ ಬೋಳಾರ್ ಅವರಿಂದ ಸಾಂಸ್ಕೃತಿಕ ಚಟುವಟಿಕೆಗಳಿಗೆ ಚಾಲನೆ.

ಕಲೆಯ ಜೊತೆಗೆ ವಿದ್ಯೆ ಇದ್ದರೆ ಹೆಚ್ಚು ಸಾಧನೆ ಮಾಡಬಹುದು:- ತುಳುನಾಡ ಮಾಣಿಕ್ಯ ಅರವಿಂದ ಬೋಳಾರ್. ಎಕ್ಸಲೆಂಟ್ ವಿದ್ಯಾ ಸಂಸ್ಥೆ ಹೆಸರಿಗೆ ತಕ್ಕಂತೆ ಎಕ್ಸಲೆಂಟ್ ಆಗಿದೆ. ಇಂತಹ ಶಾಲೆಯಲ್ಲಿ ಕಲಿಯುತ್ತಿರುವ ನೀವು ಧನ್ಯರು. ವಿದ್ಯಾರ್ಥಿ ಜೀವನ ಬಾಲ್ಯದ ಸುವರ್ಣ ಯುಗ ಚಿನ್ನಕ್ಕೆ ಬಡಿದಷ್ಟು ಆಕಾರ ಮತ್ತು ಹೆಚ್ಚು ಹೊಳಪು ಬರುತ್ತದೆ. ಕಲಾ ಮಾತೆ ಶಾರದೆ ನಮಗೆ ಒಲಿಯದಿದ್ದರೂ ನಾವೂ ಅದರ ಬೆನ್ನ ಹಿಂದೆ ಸಾಗಬೇಕು. ಎಂದು ತುಳುನಾಡ ಮಾಣಿಕ್ಯ ಅರವಿಂದ ಬೋಳಾರ್ ಹೇಳಿದರು.ಮೂಡುಬಿದಿರೆಯ ಕಲ್ಲಬೆಟ್ಟುವಿನಲ್ಲಿರುವ ಎಕ್ಸಲೆಂಟ್ ವಿದ್ಯಾ ಸಂಸ್ಥೆಯಲ್ಲಿ ನಡೆದ ವಾರ್ಷಿಕ ಸಾಂಸ್ಕೃತಿಕ ಚಟುವಟಿಕೆಗಳನ್ನು ಉದ್ಘಾಟನೆ ಮಾಡಿ ಮುಂದುವರಿದು ಮಾತನಾಡಿದ ಅವರು ವಿದ್ಯಾರ್ಥಿಗಳು ತಾವು ಕಲಿತ ಶಾಲೆಯನ್ನು ಮರೆಯಬಾರದು, ನಮ್ಮ ಮನೆಯನ್ನು ಪ್ರೀತಿ ಮಾಡಿದಂತೆ ಶಾಲೆಯನ್ನು ಪ್ರೀತಿ ಮಾಡಬೇಕು. ಶಾಲೆ ವಿದ್ಯಾ ದೇಗುಲ. ಸ್ವಂತ ಉದ್ಯೋಗ ಪಡೆದ ನಂತರ ಹೆತ್ತವರನ್ನು ಗುರುಗಳನ್ನು ಶ್ರದ್ಧೆಯಿಂದ ಸ್ಮರಿಸಬೇಕು. ತಂದೆ ತಾಯಿಯನ್ನು ನೋಡಿಕೊಂಡರೆ ಅವರ ಸಂತೋಷದಷ್ಟು ಆರ್ಶೀವಾದ ಇನ್ನೊಂದಿಲ್ಲ. ಪ್ರಪಂಚವನ್ನು ತೋರಿಸಿಕೊಟ್ಟವರು ಅವರು ಅವರೊಂದಿಗೆ ಪ್ರತಿದಿನ ಮಾತನಾಡಬೇಕು. ಪ್ರತಿಯೊಬ್ಬರಲ್ಲಿಯೂ ನನಗೆ ಎಲ್ಲಾ ಗೊತ್ತಿದೆ ಎಂಬ ಅಹಂಕಾರ ಇರಬಾರದು. ಕಲೆಯ ಜೊತೆ ವಿದ್ಯೆ ಇದ್ದರೆ ಹೆಚ್ಚು ಸಾಧನೆ ಮಾಡಬಹುದು ಎಂದರು. ವಿದ್ವಾನ್ ಯಶವಂತ್ ಎಮ್ ಜಿ ಮಾತನಾಡಿ ದೀಪ ಬೆಳಗಬೇಕಾದರೆ ದೇವರ ಅಸ್ತಿತ್ವ ಅತೀ ಮುಖ್ಯ, ಇಚ್ಛಾ ಶಕ್ತಿ, ದೈವೀಶಕ್ತಿ ಮತ್ತು ಆತ್ಮ ವಿಶ್ವಾಸ ಜೊತೆಗಿದ್ದರೆ ಎಂತಹ ಸಾಧನೆ ಬೇಕಾದರೂ ಮಾಡಬಹುದು. ಆಶ್ರಯ ಕೊಟ್ಟವರಿಗೆ ಯಾವಾಗಲೂ ನಾವೂ ಕೃತಜ್ಞರಾಗಿರಬೇಕು. ಜೀವನದಲ್ಲಿ ಸಾಧನೆ ಮಾಡಲು ಒಳ್ಳೆಯ ಸಂಸ್ಕಾರ, ಸಂಸ್ಕೃತಿ ಮತ್ತು ಸಂಸಾರ ಅತೀ ಮುಖ್ಯ. ಸಾಧನೆ ಮಾಡಲು ಒಂದು ಉತ್ತಮ ಶಿಕ್ಷಣ ಸಂಸ್ಥೆ ಎಕ್ಸಲೆಂಟ್ ಶಿಕ್ಷಣ ಸಂಸ್ಥೆ ಆಗಿದೆ. ಅಧ್ಯಯನ ಮಾಡುವಾಗ ನಾನು ದಡ್ಡ ಬೇರೆಯವರು ಜಾಣರು ಎಂಬ ಮನೋಭಾವ ಬಿಡಿ. ನಾವು ನಮ್ಮ ಮೇಲೆ ಆತ್ಮ ವಿಶ್ವಾಸ ಇಟ್ಟು ಹಂತ ಹಂತವಾಗಿ ಸಾಧನೆಯ ಮೆಟ್ಟಿಲು ಹತ್ತಿ ಅಸಾಧಾರಣೆಯ ಸಾಧನೆ ಮಾಡಬಹುದು. ನಮಗೆ ಸಹಾಯ ಮಾಡಿದವರನ್ನು ಸ್ಮರಿಸದಿದ್ದರೆ ಬದುಕು ವ್ಯರ್ಥ. ಮೊದಲು ಕೆಟ್ಟ ಸಮಯ ಇದ್ದರೆ ಮುಂದೆ ಉತ್ತಮ ಸಮಯ ಬಂದೇ ಬರುತ್ತದೆ. ಕಲೆ ಮತ್ತು ಕಲಾವಿದರನ್ನು ಬೆಳೆಸುವ, ಗೌರವಿಸುವ ಗುಣ ಯುವರಾಜ್ ಸರ್ ಮತ್ತು ರಶ್ಮಿತಾ ಮೇಡಂ ಅವರಲ್ಲಿ ಇದೆ. ಎಂದರು. ಸಂಸ್ಥೆಯ ಕಾರ್ಯದರ್ಶಿಗಳಾದ ರಶ್ಮಿತಾ ಜೈನ್ ಮಾತಾನಾಡಿ, ಕಲೆಯನ್ನು ಕಟ್ಟಿಕೊಂಡು ಜೀವನ ನಡೆಸಬಹುದು, ಕಲೆ ಹೃದಯವನ್ನು ತಟ್ಟಿದ್ದರೆ ಸರಳತೆ ಮನ ಗೆಲ್ಲುತ್ತದೆ. ಇದರಿಂದ ಜೀವನದಲ್ಲಿ ಸಾರ್ಥಕತೆ ಸಾಧಿಸಬಹುದು. ಸಾಧಕರ ಜೀವನ ನಮಗೆ ಆದರ್ಶವಾಗಬೇಕು. ಕಲೆಯನ್ನು ಜೀವನ ಪೂರ್ತಿ ಅಳವಡಿಸಿಕೊಂಡರೆ ಬದುಕು ಸುಂದರಮಯವಾಗುತ್ತದೆ. ಕಲೆಗೆ ಎಂತಹ ಕಲ್ಲನ್ನು ಶಿಲೆ ಮಾಡುವ ಸಾಮರ್ಥ್ಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಕ್ಸಲೆಂಟ್ ವಿದ್ಯಾ ಸಂಸ್ಥೆಗಳ ಅಧ್ಯಕ್ಷರಾದ ಯುವರಾಜ್ ಜೈನ್ ಮಾತನಾಡಿ ಎಲ್ಲರಿಗೂ ಭಗವಂತ ಏನಾದರೂ ಒಂದು ಪ್ರತಿಭೆಯನ್ನು ಕೊಟ್ಟಿದ್ದಾನೆ ಅದನ್ನು ಬಳಸಿಕೊಂಡು ಜೀವನವನ್ನು ರೂಪಿಸಿಕೊಳ್ಳಬೇಕು. ಜೀವನದಲ್ಲಿ ಪ್ರತಿಭೆಯಿದ್ದರೆ ಏನನ್ನು ಬೇಕಾದರೂ ಸಾಧಿಸಬಹುದು ಅಂತಹ ಕಲೆಗೆ ಮತ್ತು ಕಲಾವಿದರಿಗೆ ಗೌರವವನ್ನು ನೀಡುತ್ತಾ ಎಕ್ಸಲೆಂಟ್ ಶಿಕ್ಷಣ ಸಂಸ್ಥೆ ಬೆಳೆಯುತ್ತಿದೆ. ವಿದ್ಯಾರ್ಥಿಗಳು ಬೇರೆ ಬೇರೆ ಗುರಿಗಳನ್ನು ಇಟ್ಟು ಕೊಳ್ಳುವುದಕ್ಕಿಂತ ಒಂದೇ ಗುರಿಯನ್ನು ಬೇರೆ ಬೇರೆ ರೀತಿಯಲ್ಲಿ ಸಾಧಿಸಿ ತೋರಿಸಬೇಕು ಎಂದು ಹೇಳಿದರು. ಇದೇ ಸಂದರ್ಭದಲ್ಲಿ ಅರವಿಂದ ಬೋಳಾರ್ ಮತ್ತು ಯಶವಂತ್ ಎಂ ಜೆ ಅವರನ್ನು ಸಂಸ್ಥೆಯ ಕಡೆಯಿಂದ ಸನ್ಮಾನಿಸಿ ಗೌರವಿಸಲಾಯಿತು. ವೇದಿಕೆಯಲ್ಲಿ ಸಭಾ ಕಾರ್ಯಕ್ರಮದ ನಂತರ ಸಂಪನ್ಮೂಲ ಶಿಕ್ಷಕರು ಹಾಗೂ ಸಂಸ್ಥೆಗೆ ಹೊಸದಾಗಿ ಈ ವರ್ಷ ದಾಖಲಾದ ವಿದ್ಯಾರ್ಥಿಗಳ ಸಾಂಸ್ಕೃತಿಕ ಪ್ರತಿಭಾ ಪ್ರದರ್ಶನ ನಡೆಯಿತು. ಶಾಲೆಯ ಮುಖ್ಯೋಪಾಧ್ಯಾರಾದ ಶಿವಪ್ರಸಾದ್ ಭಟ್ ಮತ್ತು ಸಿ ಬಿ ಎಸ್ ಇ ಶಾಲೆಯ ಪ್ರಾಂಶುಪಾಲರು ಶ್ರೀಪ್ರಸಾದ್ ಮತ್ತು ಉಪ ಮುಖ್ಯೋಪಾಧ್ಯಾಯ ಜಯಶೀಲ ಉಪಸ್ಥಿತರಿದ್ದರು.

Click here to View All